ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರ, ಮಾತೆ ಶ್ರೀ ಪದ್ಮಾವತಿ ದೇವಿ ದಿಗಂಬರ ಜೈನ ಬಸದಿ, ನೆಲ್ಲಿಕೇರಿ, ಕುಮಟಾ. ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ದೇವಿಯವರ ಈ ಬಸದಿ ಕುಮಟಾ ಪೇಟೆಯ ನೆಲ್ಲಿಕೇರಿ ಬಡಾವಣೆಯಲ್ಲಿದೆ. == ಸ್ಥಳ == ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತಿ ದೇವಿಯವರ ಈ ಬಸದಿ ಕುಮಟಾ ಪೇಟೆಯ ನೆಲ್ಲಿಕೇರಿ ಬಡಾವಣೆಯಲ್ಲಿದೆ. ಇಲ್ಲಿಗೆ ಸರಕಾರಿ ಹೊಸ ಬಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ಹಾಗೂ ಹಳೇ ಬಸ್ ನಿಲ್ದಾಣದಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. == ನಿರ್ಮಾಣ‌‌‌‌‌‍ == ಈ ಬಸದಿ ಇಲ್ಲಿಯ ಪುರೋಹಿತರಾದ ಶ್ರೀ ಗುರುರಾಜ ಇಂದ್ರರ ಮನೆಗೆ ತಾಗಿಕೊಂಡೇ ಇದೆ. ಅವರೇ ಇಲ್ಲಿಯ ಅಭಿಷೇಕ ಪೂಜಾದಿಗಳನ್ನು ನಡೆಸುತ್ತಾರೆ. ಗುರುರಾಜ ಇಂದ್ರರು ತನ್ನ ಮನೆಯಲ್ಲಿದ್ದ ಗೃಹ ಚೈತ್ಯಾಲಯವನ್ನು ದೊಡ್ಡ ಮೂರ್ತಿಯೊಂದಿಗೆ ಒಂದು ಪೂರ್ಣ ಪ್ರಮಾಣದ ಬಸದಿಯನ್ನಾಗಿ ೩ ವರ್ಷಗಳ ಹಿಂದೆ ಪುನರ್ ನಿರ್ಮಿಸಿದ್ದಾರೆ. ಸಮೀಪದಲ್ಲಿ ಬೇರೆ ಬಸದಿಗಳು ಇಲ್ಲಿದ ಕಾರಣ ಕುಮಟದಲ್ಲಿರುವ ಸುಮಾರು ೨೦-೨೫ ಜೈನ ಕುಟುಂಬದವರು ಈ ಬಸದಿಗೆ ಆಗಾಗ ಬರುತ್ತಿರುತ್ತಾರೆ. ಇದು ಟೆರೇಸ್ ಕಟ್ಟಡವಾಗಿದ್ದು ಭದ್ರವೂ ಶುಚಿಯೂ ಆಗಿ ಇದೆ. ಮೊದಲು ಇದೊಂದು ಮನೆಯ ಬಸದಿಯಾಗಿದ್ದುದರಿಂದ ಇದರ ಹೆಚ್ಚಿನ ಇತಿಹಾಸವು ತಿಳಿದು ಬರುವುದಿಲ್ಲ. ಸದ್ಯ ಇದಕ್ಕೆ ಬೇರೆಯೇ ಆದ ಆಡಳಿತ ಮಂಡಳಿ ಇರುವುದಿಲ್ಲ. ಪುರೋಹಿತರೇ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. == ವಿಗ್ರಹ ವಿನ್ಯಾಸ == ಗರ್ಭಗೃಹದಲ್ಲಿ ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿ ಬಿಂಬವಲ್ಲದೆ ಚೌವೀಸ ತೀರ್ಥಂಕರರು, ಶ್ರೀ ಪದ್ಮಾವತಿ ದೇವಿ, ಜ್ವಾಲಾಮಾಲಿನಿ, ಕೂಷ್ಮಾಂಡಿನಿ ದೇವಿ ಹಾಗೂ ಸರ್ವಾಹ್ಣಯಕ್ಷನ ಮೂರ್ತಿಗಳು ಇವೆ. ಬ್ರಹ್ಮ ದೇವರ ಮೂರ್ತಿ ಇರುವುದಿಲ್ಲ. ಬಸದಿಗೆ ಮಾನಸ್ತಂಭವಿಲ್ಲ. ಪೂಜೆ ಆಲಂಕಾರಗಳನ್ನು ಮಾಡಲು ವಿಭಿನ್ನ ಜಾತಿಯ ಹೂಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಆದರೆ ಪಾರಿಜಾತ ಹೂವಿನ ಗಿಡ ಇರುವುದಿಲ್ಲ. ಗರ್ಭಗೃಹವೇ ಪ್ರಬಲವಾಗಿದ್ದು ಎದುರಿಗೆ ಚಂದ್ರಶಾಲೆಯನ್ನು ನಿರ್ಮಿಸಿಲ್ಲ, ಬಸದಿಯ ಎದುರಿಗಿರುವ ಶುಚಿಯಾದ ಪ್ರಾಂಗಣವನ್ನೆ ಬಸದಿಯ ಎಲ್ಲಾ ಕಾರ್ಯಗಳಿಗೆ ಉಪಯೋಗಿಸುತ್ತಾರೆ. ಬೇರೆ ಶಿಲಾ ಮೂರ್ತಿಗಳಾಗಲೀ ತೀರ್ಥಮಂಟಪವಾಗಲಿ ಪ್ರಾರ್ಥನಾ ಮಂಟಪವಾಗಲೀ ಇದಕ್ಕೆ ಇರುವುದಿಲ್ಲ. == ಆಚರಣೆ == ಮೂಲನಾಯಕ ಶ್ರೀ ಪಾರ್ಶ್ವನಾಥ ಸ್ವಾಮಿಯ ಬಿಂಬವು ಶಿಲೆಯದ್ದಾಗಿ ಪದ್ಯಪೀಠದ ಮೇಲೆ ಪರ್ಯಂಕಾಸನ ಭಂಗಿಯಲ್ಲಿದೆ. ಇದಕ್ಕೆ ಪ್ರತಿದಿನ ಜಲಾಭಿಷೇಕ ಮತ್ತು ಪೂಜೆ ನಡೆಯುತ್ತದೆ. ಬಿಂಬವು ಸುತ್ತ ಪ್ರಭಾವಳಿ ಇಲ್ಲದೆ ಸ್ವತಂತ್ರವಾಗಿರುವ ಸ್ಥಿತಿಯಲ್ಲಿ ಕಂಡುಬರುತ್ತದೆ. ಸ್ವಾಮಿಯ ಹಿಂಬದಿ ಒಂದು ಅಂಕಣದಲ್ಲಿ ಪೂಜೆಗೆ ಸಂಬಂಧಿಸಿದ ದರ್ಪಣ ಪತಾಕೆ ಮುಂತಾದ ಪವಿತ್ರ ವಸ್ತುಗಳನ್ನು ಇಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ದಿನಕ್ಕೆ ಬಾರಿ ಪೂಜೆ ನಡೆಯುತ್ತದೆ. ಬಸದಿಯಲ್ಲಿ ವಾರ್ಷಿಕೋತ್ಸವ, ಕಾರ್ತಿಕ ದೀಪೋತ್ಸವ, ಮಹಾವೀರ ನಿರ್ವಾಣೋತ್ಸವ ಇತ್ಯಾದಿಗಳನ್ನು ಆಚರಿಸಲಾಗುತ್ತದೆ. ವಾಸದ ಮನೆಯು ಜೊತೆಯಲ್ಲಿರುವುದರಿಂದ ಎಲ್ಲ ಕಡೆಗಳಲ್ಲಿ ಬಲಿ ಕಲ್ಲುಗಳನ್ನು ಸ್ಥಾಪಿಸಲಾಗಿಲ್ಲ. ಎದುರುಗಡೆಯಲ್ಲಿ ಚಿಕ್ಕದೊಂದು ಬಲಿ ಪೀಠವಿದೆ. ಪದ್ಮಾವತಿ ದೇವಿ, ಜ್ವಾಲಾಮಾಲಿನಿ ಮತ್ತು ಕೂಷ್ಮಾಂಡಿನಿಯರಿಗೆ ವಿಶೇಷ ಪೂಜೆಯು ನಡೆಯುತ್ತದೆ. ಮಾತೆ ಪದ್ಮಾವತಿ ದೇವಿಗೆ ಅಲಂಕಾರ ನಡೆಸಿ ವಿಶೇಷ ಪೂಜೆಯೊಂದಿಗೆ ಇಲ್ಲಿ ಹೂವಿನ ಪ್ರಸಾದ ಕೇಳುವ ಕ್ರಮವಿದೆ. ಈ ಬಿಂಬವು ಕರಿಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದುವರೆ ಅಡಿ ಎತ್ತರವಿದೆ. ಪ್ರಭಾವಳಿಯಲ್ಲಿ ಮೇಲ್ಗಡೆ ಕೀರ್ತಿಮುಖವೂ ಕೆಳಗಡೆ ಕುಕ್ಕುಟ ಸರ್ಪದ ಆಕೃತಿಯೂ ಇವೆ. ಚತುರ್ಬಾಹುಗಳ ಈ ಬಿಂಬವು ಲಲಿತಾಸನ ಭಂಗಿಯಲ್ಲಿ ಕುಳಿತುಕೊಂಡು ಬಹು ಆಕರ್ಷಕವಾಗಿದೆ. == ಉಲ್ಲೇಖಗಳು ==